ಶಿವಮೊಗ್ಗ:ʼಇಲ್ಲಿನ ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮದ 15 ವರ್ಷದ ಚಿರತೆ ʼಭದ್ರಾʼ ಪಾರ್ಶ್ವವಾಯುಗೆ ತುತ್ತಾಗಿ ಕಾಲುಗಳ ಸ್ವಾಧೀನ ಕಳೆದುಕೊಂಡ ಹಿನ್ನೆಲೆಯಲ್ಲಿ ನಂಜಪ್ಪ ಆಸ್ಪತ್ರೆಯಲ್ಲಿ ಎಂಆರ್ಐ ಸ್ಕ್ಯಾನ್ ಮಾಡಲಾಯಿತು.ʼ
ಚಿರತೆ ಭದ್ರಾ ಕಳೆದ ಕೆಲ ದಿನಗಳಿಂದ ಸ್ವಾಧೀನವಿಲ್ಲದೇ ಓಡಾಡಲು ಸಾಧ್ಯವಿಲ್ಲದಂತಾಗಿತ್ತು. ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ, ಬೆನ್ನುಹುರಿಗೆ ಪೆಟ್ಟು ಬಿದ್ದಿದೆಯೇ ಅಥವಾ ಯಾವುದೇ ಸೋಂಕು ತಗುಲಿದೆಯೇ ಎಂಬುದನ್ನು ದೃಢಪಡಿಸಲು ವೈದ್ಯರು ಎಂಆರ್ಐ ಸ್ಕ್ಯಾನ್ಗೆ ಶಿಫಾರಸು ಮಾಡಿದ್ದರು.
ಚಿರತೆಯ ಎಂಆರ್ಐ ಸ್ಕ್ಯಾನ್ ಮಾಡಲು ನಂಜಪ್ಪ ಆಸ್ಪತ್ರೆಯ ಆಡಳಿತ ಒಪ್ಪಿಗೆ ಸೂಚಿಸಿತ್ತು. ಹಗಲು ಹೊತ್ತು ರೋಗಿಗಳು, ಆಸ್ಪತ್ರೆಯ ಸಿಬ್ಬಂದಿ ಹೆದರಿಕೊಳ್ಳಬಹುದು ಎಂಬ ಕಾರಣಕ್ಕೆ ತಡರಾತ್ರಿ ಚಿರತೆಯನ್ನು ಆಸ್ಪತ್ರೆಗೆ ಕರೆತರಲು ಮೃಗಾಲಯ ಪ್ರಾಧಿಕಾರ ನಿರ್ಧರಿಸಿತ್ತು.
ಹುಲಿ-ಸಿಂಹ ಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಕೆ.ವಿ.ಅಮರಾಕ್ಷರ ಹಾಗೂ ವನ್ಯಜೀವಿ ವೈದ್ಯ ಡಾ.ಮುರಳಿಮೋಹನ್ ನೇತೃತ್ವದ ತಂಡ ಚಿರತೆಯನ್ನು ಆಸ್ಪತ್ರೆಗೆ ಕರೆತಂದಿತ್ತು. ಒಂದೂವರೆ ಗಂಟೆ ಅವಧಿಗೆ ಚಿರತೆಗೆ ಅರೆವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಿ ನಂತರ ಎಂಆರ್ ಐ ಸ್ಕ್ಯಾನ್ ಗೆ ಒಳಪಡಿಸಲಾಯಿತು.
ಸ್ಕ್ಯಾನ್ ವರದಿಯಲ್ಲಿ ಚಿರತೆಗೆ ಯಾವುದೇ ಪೆಟ್ಟು ಅಥವಾ ಸೋಂಕಿನ ಲಕ್ಷಣ ಕಂಡುಬಂದಿಲ್ಲ. ವಯೋಸಹಜ ಕಾರಣದಿಂದಲೇ ಪಾರ್ಶ್ವವಾಯು ಉಂಟಾಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಸಾಮಾನ್ಯವಾಗಿ ಕಾಡಿನಲ್ಲಿ ಚಿರತೆಗಳು 10 ವರ್ಷ ಬದುಕುತ್ತವೆ. ಆದರೆ, ಮೃಗಾಲಯದಲ್ಲಿ ಭದ್ರಾ 15 ವರ್ಷ ಬದುಕಿರುವುದು ಅಪರೂಪ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರಾಗೆ ಮುಂದಿನ ಚಿಕಿತ್ಸೆ ಮೃಗಾಲಯದಲ್ಲೇ ಮುಂದುವರೆಯಲಿದೆ ಎಂದು ಹುಲಿ-ಸಿಂಹ ಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಕೆ.ವಿ. ಅಮರಾಕ್ಷರ ಮಾಧ್ಯಮಗಳಿಗೆ ಮಾಹಿತಿ ತಿಳಿಸಿದ್ದಾರೆ.
📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ
shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.
ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?
✅ ಈಗಲೇ ವಾಟ್ಸಾಪ್ ಗುಂಪು ಸೇರಿ'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
👍 Facebook ನಲ್ಲಿ ಫಾಲೋ ಮಾಡಿ
Leave a comment