ಶಿವಮೊಗ್ಗ:’ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಪಾರ್ವತಿ ಸಾಲೇರ ಅವರು ಎಂಬಿಎ ವಿಭಾಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ವ್ಯಾಪ್ತಿಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದು ನಾಲ್ಕು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಮತ್ತೋರ್ವ ವಿದ್ಯಾರ್ಥಿ ಸಂಜಯ್ ಎಂ.ವಿ. ಅವರು ಎಂಟೆಕ್ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಎಂಟನೇ ರ್ಯಾಂಕ್ ಗಳಿಸಿದ್ದಾರೆ’ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ (ಎನ್ಇಎಸ್) ಅಧ್ಯಕ್ಷ ಜಿ.ಎಸ್. ನಾರಾಯಣರಾವ್ ತಿಳಿಸಿದರು.ಬೆ
ಬೆಳಗಾವಿಯಲ್ಲಿ ನಡೆದ ವಿಟಿಯು 25ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಪದವಿ ಪ್ರಮಾಣಪತ್ರ ಹಾಗೂ ಚಿನ್ನದ ಪದಕಗಳನ್ನು ನೀಡಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಪಾರ್ವತಿ ಸಾಲೇರ ಅವರು ಜೆ.ಎನ್.ಎನ್.ಸಿ.ಇನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿಯಲ್ಲಿ ಆರು ಚಿನ್ನದ ಪದಕಗಳನ್ನು ಪಡೆದಿದ್ದರು. ಇದೀಗ ಎಂಬಿಎ ಸ್ನಾತಕೋತ್ತರ ಪದವಿಯಲ್ಲಿಯೂ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅವರು ಭದ್ರಾವತಿ ಕ್ಷೇತ್ರದ ಮಾಜಿ ಶಾಸಕ ಸಾಲೇರ ಸಿದ್ದಪ್ಪ ಅವರ ಮೊಮ್ಮಗಳು. ಅವರ ತಾಯಿ ಐಶ್ವರ್ಯ ಸಾಲೇರ ಕೂಡ ಜೆ.ಎನ್.ಎನ್.ಸಿ.ಇ ಹಿರಿಯ ವಿದ್ಯಾರ್ಥಿನಿಯಾಗಿದ್ದು, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ಐದನೇ ರ್ಯಾಂಕ್ ಪಡೆದಿದ್ದರು ಎಂದು ತಿಳಿಸಿದರು.
‘ಎನ್ಇಎಸ್ ಚಿನ್ನದ ಪದಕ ಗರಿ’
ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಪಾರ್ವತಿ ಸಾಲೇರ ಅವರಿಗೆ ಸಂಸ್ಥೆಯ ಅಮೃತಮಹೋತ್ಸವದ ಸ್ಮರಣಾರ್ಥವಾಗಿ ಎನ್ಇಎಸ್ ಅಮೃತಮಹೋತ್ಸವ ಚಿನ್ನದ ಪದಕ ನೀಡಲಾಗುವುದು ಎಂದು ನಾರಾಯಣರಾವ್ ಘೋಷಿಸಿದರು. ಫೆಬ್ರವರಿ ಕೊನೆಯ ವಾರದಲ್ಲಿ ನಡೆಯುವ ಐಡಿಯಾ ಲ್ಯಾಬ್ ಉದ್ಘಾಟನಾ ಸಮಾರಂಭದಲ್ಲಿ ರ್ಯಾಂಕ್ ವಿಜೇತರನ್ನು ಆಡಳಿತ ಮಂಡಳಿ ಅಭಿನಂದಿಸಲಿದೆ.
ವಿದ್ಯಾಸಂಸ್ಥೆಗೆ ಕೃತಜ್ಞತೆ
ಪಾರ್ವತಿ ಸಾಲೇರ ಮಾತನಾಡಿ, “ಬಿಇ ಮತ್ತು ಎಂಬಿಎನಲ್ಲಿ ಮೊದಲ ರ್ಯಾಂಕ್ ಪಡೆಯಲು ಕಾಲೇಜು ಮತ್ತು ಉಪನ್ಯಾಸಕರಿಂದ ಉತ್ತಮ ಪೂರಕ ವಾತಾವರಣ ದೊರೆಯಿತು. ವಿದ್ಯಾಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈಗಾಗಲೇ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪನಿಯಲ್ಲಿ ಪ್ರಮುಖ ಹುದ್ದೆಯ ಅವಕಾಶ ದೊರೆತಿದ್ದು, ಮುಂದಿನ ಉನ್ನತ ಗುರಿಗಳಿಗಾಗಿ ಯೋಜನೆ ರೂಪಿಸುತ್ತಿದ್ದೇನೆ” ಎಂದು ಹೇಳಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ಕಾಲೇಜಿನಲ್ಲಿ ಸಂಶೋಧನೆ ಹಾಗೂ ನಾವೀನ್ಯತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. 2025ರಲ್ಲಿ ಸುಮಾರು 14 ಉಪನ್ಯಾಸಕರು ಪಿಎಚ್ಡಿ ಪದವಿ ಪಡೆದಿದ್ದಾರೆ. ಟಿಸಿಎಸ್, ಐಬಿಎಂ ಸೇರಿದಂತೆ ಪ್ರತಿಷ್ಠಿತ ಕಂಪನಿಗಳು ಉದ್ಯೋಗಾವಕಾಶ ನೀಡುತ್ತಿವೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ವೈ. ವಿಜಯಕುಮಾರ್ ಮಾತನಾಡಿ, ನ್ಯೂಜೆನ್ ಐಇಡಿಸಿ ಮೂಲಕ ವಿದ್ಯಾರ್ಥಿಗಳ ನವೀನ ಆಲೋಚನೆಗಳನ್ನು ಯೋಜನೆಗಳಾಗಿ ರೂಪಿಸಿ ಸ್ವಂತ ಕಂಪನಿಗಳನ್ನು ಸ್ಥಾಪಿಸಲು ವೇದಿಕೆ ಒದಗಿಸಲಾಗುತ್ತಿದೆ ಎಂದು ಹೇಳಿದರು.
ಎನ್ಇಎಸ್ ಸಹಕಾರ್ಯದರ್ಶಿ ಡಾ.ಪಿ. ನಾರಾಯಣ್, ಸಂಶೋಧನಾ ಡೀನ್ ಡಾ.ಎಸ್.ವಿ. ಸತ್ಯನಾರಾಯಣ, ವಿಭಾಗ ಮುಖ್ಯಸ್ಥರು, ಪೋಷಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ
shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.
ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?
✅ ಈಗಲೇ ವಾಟ್ಸಾಪ್ ಗುಂಪು ಸೇರಿ'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
👍 Facebook ನಲ್ಲಿ ಫಾಲೋ ಮಾಡಿ
Leave a comment