ತೀರ್ಥಹಳ್ಳಿ:’ಪಟ್ಟಣದ ಎಪಿಎಂಸಿ ಆವರಣದಲ್ಲಿ ಫೆಬ್ರವರಿ 5ರಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ನೂತನ ಶಾಖೆ ಆರಂಭಗೊಳ್ಳಲಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಇದು 5ನೇ ಶಾಖೆಯಾಗಿದ್ದು, ಮುಂದಿನ ದಿನಗಳಲ್ಲಿ ಆರಗ, ದೇವಂಗಿ, ಮೇಗರವಳ್ಳಿ ಹಾಗೂ ಕಟ್ಟೆಹಕ್ಕಲು ಗ್ರಾಮಗಳಲ್ಲಿ ಹೊಸ ಶಾಖೆ ತೆರೆಯುವ ಯೋಜನೆ ರೂಪಿಸಲಾಗಿದೆ’ ಎಂದು ಡಿಸಿಸಿ ಬ್ಯಾಂಕ್ ಜಿಲ್ಲಾ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಜಿಲ್ಲಾ ಸಹಕಾರ ಬ್ಯಾಂಕುಗಳಿಗೆ ಯಾವುದೇ ಆರ್ಥಿಕ ನೆರವು ಲಭ್ಯವಾಗುತ್ತಿಲ್ಲ. ಸಬ್ಸಿಡಿಯನ್ನು ಶೇ.80ರಷ್ಟು ಕಡಿತಗೊಳಿಸಲಾಗಿದ್ದು, ಮೊದಲು ಶೇ.90ರಷ್ಟಿದ್ದ ಅನುದಾನ ಇದೀಗ ಕೇವಲ ಶೇ.10ಕ್ಕೆ ಇಳಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಡಿಸಿಸಿ ಬ್ಯಾಂಕ್ ಪ್ರಸ್ತುತ ₹3,750 ಕೋಟಿ ಬಂಡವಾಳ ಹೊಂದಿದ್ದು, ಸರ್ಕಾರದ ಒಂದೇ ಒಂದು ರೂಪಾಯಿಯ ಸಹಾಯವಿಲ್ಲದೆ ಆರ್ಥಿಕವಾಗಿ ಸುಭದ್ರವಾಗಿದೆ. ನಬಾರ್ಡ್ನಿಂದ ₹120 ಕೋಟಿ ನೆರವು ಪಡೆದಿದ್ದು, ಉಳಿದಂತೆ ಸ್ವಂತ ಸಂಪನ್ಮೂಲಗಳನ್ನೇ ಅವಲಂಬಿಸಿದೆ ಎಂದರು.
ವ್ಯಹಾರಸ್ಥರಿಗೆ ₹5 ಕೋಟಿ ವರೆಗೆ ಓವರ್ಡ್ರಾಫ್ಟ್ ಸೌಲಭ್ಯ ನೀಡಲಾಗುವುದು. ಮುಂದಿನ ವರ್ಷ ಬ್ಯಾಂಕ್ 75 ವರ್ಷ ಪೂರೈಸಲಿದ್ದು, ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾದ್ಯಂತ 50 ಶಾಖೆ ತೆರೆಯುವ ಗುರಿ ಹೊಂದಲಾಗಿದೆ. ಇದರಿಂದ ಜಿಲ್ಲೆಯ ಶೇ.75ರಷ್ಟು ರೈತರಿಗೆ ಬ್ಯಾಂಕಿಂಗ್ ಸೇವೆ ತಲುಪಲಿದೆ ಎಂದು ತಿಳಿಸಿದರು.
ಪ್ರಸ್ತುತ ವರ್ಷ ಕಿಸಾನ್ ಕ್ರೆಡಿಟ್ ಯೋಜನೆಯಡಿ ಜಿಲ್ಲೆಯ 1.10 ಲಕ್ಷ ರೈತರಿಗೆ ₹1,250 ಕೋಟಿ ಸಾಲ ವಿತರಿಸಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ₹100 ಕೋಟಿಗೂ ಅಧಿಕ ಹಾಗೂ 3,500 ಸ್ವಸಹಾಯ ಗುಂಪುಗಳಿಗೆ ₹160 ಕೋಟಿ ಸಾಲ ನೀಡಲಾಗಿದೆ. ಶೇ.3 ಬಡ್ಡಿಯಲ್ಲಿ 1,000 ರೈತರಿಗೆ ಮಧ್ಯಮಾವಧಿ ಸಾಲ ಒದಗಿಸಲಾಗಿದೆ. ಬಸವಾನಿ ಪಿಎಸಿಎಸ್ ಸೇರಿ 7 ಸಂಘಗಳಿಗೆ ಬಡ್ಡಿರಹಿತ ಆರ್ಥಿಕ ನೆರವು ನೀಡಲಾಗಿದೆ ಎಂದರು.
📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ
shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.
ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?
✅ ಈಗಲೇ ವಾಟ್ಸಾಪ್ ಗುಂಪು ಸೇರಿ'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
👍 Facebook ನಲ್ಲಿ ಫಾಲೋ ಮಾಡಿ
Leave a comment